ಬೆಳಗಾವಿ
ಇಲ್ಲಿನ ಟಿಳಕವಾಡಿ ನಗರದ ವ್ಯಾಕ್ಸಿನ್ ಡಿಪೋದಲ್ಲಿರುವ ಡಿಹೆಚ್ಒ ಕಚೇರಿಗೆ ಕೋವಿಶೀಲ್ಡ್ ಲಸಿಕೆ ಪುಣೆಯಿಂದ ಇಂದು ಬೆಳಗಿನ ಜಾವ ಸರಿಯಾಗಿ 5 ಗಂಟೆಗೆ ಆಗಮಿಸಿತ್ತು. ಆದರೆ ಕೊರೊನಾ ಲಸಿಕೆಗಳನ್ನು ಸ್ವಾಗತ ಮಾಡಿಕೊಳ್ಳಬೇಕಿದ್ದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಾರಾಷ್ಟ್ರ ಗಡಿ ಪ್ರದೇಶದಿಂದ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್ ಗೇಟ್ ಮೂಲಕ ಎಂಹೆಚ್ 04 ಜೆಕೆ 1669 ಸಂಖ್ಯೆಯ ವಾಹನದಲ್ಲಿ 3.10ಕ್ಕೆ ಕೋವಿಶೀಲ್ಡ್ ಲಸಿಕೆ ಗಡಿ ಪ್ರವೇಶ ಮಾಡಿತ್ತು. ಮಹಾರಾಷ್ಟ್ರದ ಗಡಿವರೆಗೂ ಲಸಿಕಾ ವಾಹನಕ್ಕೆ ಮಹಾರಾಷ್ಟ್ರ ಪೊಲೀಸರು ಭದ್ರತೆ ಒದಗಿಸಿದ್ದರು. ಬಳಿಕ ಕರ್ನಾಟಕ ಪೊಲೀಸರಿಂದ ಲಸಿಕೆ ಸಾಗಣೆ ವಾಹನಕ್ಕೆ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿತ್ತು.
ಆದ್ರೆ, ಮಹಾರಾಷ್ಟ್ರದ ಪುಣೆಯಿಂದ ಕೊರೊನಾ ಲಸಿಕಾ ವಾಹನ ಆಗಮಿಸಿದರೂ ಕೊರೊನಾ ಲಸಿಕಾ ವಾಹನವನ್ನು ಸ್ವಾಗತಿಸಿಕೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿರಲಿಲ್ಲ. ವಾಹನ ಚಾಲಕನಿಗೆ, ಹಾಗೂ ಪೊಲೀಸರಿಗೆ ಲಸಿಕೆಗಳನ್ನು ಎಲ್ಲಿ ಇಡಬೇಕೆಂಬ ಮಾಹಿತಿ ಇಲ್ಲ. ಇತ್ತ ಡಿಹೆಚ್ಓ ಕಚೇರಿ ಸೆಕ್ಯುರಿಟಿ ಗಾರ್ಡ್ ಹಾಗೂ ಪೊಲೀಸರು ಸಂಪರ್ಕಿಸಲು ಪ್ರಯತ್ನಿಸಿದರು ಯಾವೊಬ್ಬ ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ.
ಅಧಿಕಾರಿಗಳ ಈ ನಿರ್ಲಕ್ಷ್ಯದ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಸದ್ಯ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಬಿಗಿ ಭದ್ರತೆ ಒದಗಿಸಿದ್ದಾರೆ.